ಇಸಾವಾ: ಪೂರ್ವಜರ ಶ್ರಾದ್ದ ಕೇಂದ್ರ
ಪಶುಪಾಲಕರಲ್ಲಿ/ಆದಿವಾಸಿಗಳಲ್ಲಿ/ಬುಡಕಟ್ಟು ಸಮುದಾಯಗಳಲ್ಲಿ ಪುನರ್ಜನ್ಮದಲ್ಲಿ ನಂಬಿಕೆ ಇರವುದನ್ನು ಕಾಣಬಹುದು. ಪೂರ್ವಜರು (ದಿವಂಗತರು) ಪುನರ್ಜನ್ಮದಲ್ಲಿ ಮಕ್ಕಳ/ಮೊಮ್ಮಕ್ಕಳ ರೂಪದಲ್ಲಿ ಜನ್ಮ ತಾಳುತ್ತಾರೆಂದು ನಂಬುತ್ತಾರೆ. ಪೂರ್ವಜನ್ಮದ ಪುಣ್ಯದ ಫಲದಿಂದಾಗಿ ಈ ಜನ್ಮದಲ್ಲಿ (ಪುನರ್ಜನ್ಮದಲ್ಲಿ) ದಿವಂಗತರ ಅವತಾರ ರೂಪವಾಗಿ ಮಕ್ಕಳು/ಮೊಮ್ಮಕ್ಕಳು ಹುಟ್ಟುತ್ತಾರೆಂಬ ಬಲವಾದ ನಂಬಿಕೆ ಧನಗರ ಗೌಳಿಗರಿಗೆ ಇದೆ. ಧನಗರ ಗೌಳಿಗರಲ್ಲಿ ಪೂರ್ವಜರು ಹಾಗು ಪುನರ್ಜನ್ಮ ಇವೆರಡೂ ತುಂಬಾ ಮಹತ್ವದ ವಿಚಾರಗಳು. ಇವರು ತಮ್ಮ ಮಕ್ಕಳಿಗೆ/ಮೊಮ್ಮಕ್ಕಳಿಗೆ ಪೂರ್ವಜರ ಅಥವಾ ಹಿರಿಯರ ಹೆಸರುಗಳನ್ನು ಇಡುತ್ತಾರೆ. ಈ ಹೆಸರು ಅವರ ಕುಲದೇವರ ಹೆಸರಿನೊಂದಿಗೆ ಸಮಿಕರಣಗೊಂಡಿರುತ್ತದೆ. ಉದಾ: ಬೀರು-ಬೀರೋಬಾ, ವಿಠ್ಠು-ವಿಠೋಬಾ, ಜಾನು-ಜಾನೋಬಾ, ಸಿದ್ದು-ಸಿದೋಬಾ, ದೊಂಡು-ದೊಂಡೋಬಾ, ದೂಳು-ದೂಳೋಬಾ, ನವಲು-ನವಲ್ಯಾ. ಇದು ಬುಡಕಟ್ಟು ಸಮುದಾಯಗಳಲ್ಲಿನ ಪ್ರಮುಖ ಲಕ್ಷಣವಾಗಿದೆ. ಇಸಾವಾ ಎನ್ನುವುದು ಹಿರಿಯರು ತೀರಿಕೊಂಡಾಗ ಅವರ ನೆನಪಿನಾರ್ಥ ಅವರ ಪ್ರತೀಕವಾಗಿ, ಸಂಕೇತವಾಗಿ ಊರಿನ ಸೀಮೆಯ ಭಾಗದಲ್ಲಿ ಮರದ (ಅಸೊನ್) ಕೆಳಗೆ ಅಗಲಿದ ಪ್ರತಿಯೊಬ್ಬರ ಹೆಸರಿನ್ಲೂ ಒಂದು ಕಲ್ಲು ಇಡಲಾಗುತ್ತದೆ. ಇದನ್ನು ಇಸಾವಾ ಎನ್ನುತ್ತಾರೆ. ಅಲ್ಲಿ ಆಯಾ ಊರಿನಲ್ಲಿ ತೀರಿಕೊಂಡ ಎಲ್ಲರ ಹೆಸರಿನಲ್ಲಿ ಕಲ್ಲುಗಳನ್ನು ಇಡಲಾಗುತ್ತದೆ. ಅದಕ್ಕೆ ಹಬ್ಬಹರಿದಿನಗಳಲ್ಲಿ, ಕಷ್ಟಕಾಲದಲ್ಲಿ ಹೂವು ಹಣ್ಣುಗಳನ್ನು ಹಾಗು ಅವರ ಇಷ್ಟದ ವಸ್ತು/ತಿನಿಸುಗಳನ್ನು ಇಟ್ಟು ಪೂಜಿಸಲ್ಪಡುತ್ತದೆ. ದಸರಾ ಹಬ್ಬದಲ್ಲಿ ಶ್ರಾದ್ದದ ಸಂದರ್ಭದಲ್ಲಿ ಪೂಜೆಪುರಸ್ಕಾರಗಳನ್ನು ಹೆಚ್ಚಾಗಿ ನೇರವೇರಿಸುತ್ತಾರೆ. ಪೂಜಾ ವಿಧಾನಗಳಲ್ಲಿ ಯಾವುದೇ ಆಡಂಬರ ಇರುವುದಿಲ್ಲ. ಪ್ರಾಕೃತಿಕವಾಗಿ, ಪ್ರಕೃತಿಯ ಆರಾಧಕರಾಗಿ ಸರಳವಾಗಿ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಅಗಲಿದ ಹಿರಿಯರ ಹೆಸರಿನಲ್ಲಿರುವ ಕಲ್ಲಿನ ರೂಪದ ಇಸಾವಾ ಧನಗರ ಗೌಳಿಗರ ಆರಾಧನೆಯ/ಪೂಜೆಯ ಕೇಂದ್ರಸ್ಥಾನಗಳಾಗಿರುತ್ತವೆ.

